10.ಹರಿತವಿರದ ಕೊಡಲಿಗೆ ಹಸಿಯ ಟೊಳ್ಳಿನ ಮರ

ಕೆಳಗಿನ ಪಾಡಿಯ ಮೇಲಕ್ಕಿರುವ ದೇವರಕಾಡು ಹೂವಿನ ಕೊಲ್ಲಿಯ ಒಂದು ಭಾಗವಾಗಿತ್ತು. ಆದರೂ ಅಲ್ಲಿ ಕಾಫಿಯನ್ನೂ ಬೆಳೆಸದೆ ಏಲಕ್ಕಿಯನ್ನೂ ಬೆಳೆಸದೆ ಅದು ಕಾಡಿನಿಂದಲೂ ಕಮ್ಯುನಿಷ್ಟ್ ಬಲ್ಲೆಯಿಂದಲೂ ತುಂಬಿಕೊಂಡು ಅದರೊಳಗೆ ಹೊಕ್ಕರೆ ತಾವು ಎಲ್ಲಿರುವೆವು ಎಂದು ಯಾರಿಗೂ ಅರಿವಾಗುತ್ತಿರಲಿಲ್ಲ. ಬೀಟೆಯ ಮರಗಳೂ, ಹೊನ್ನೆಯ ಮರಗಳೂ, ಹೆಬ್ಬಲಸು, ಬೂರುಗ, ಗಂಧದ ಮರಗಳೂ ಅಲ್ಲಿ ಆಕಾಶದ ಎತ್ತರಕ್ಕೆ ಬೆಳೆದು ನಿಂತಿದ್ದವು. ಬೇರೆ ಎಲ್ಲಿಯೂ ಕಾಣದ ಕಾಡುಜಾತಿಯ ಪಾನವಾಳದ ಮರಗಳೂ ಅಲ್ಲಿ ಯಾವಾಗಲೂ ಹೂಬಿಟ್ಟುಕೊಂಡು ನಿಂತಿರುತ್ತಿದ್ದವು. ಅಲ್ಲಿ ಹರಿಯುವ ತೊರೆಯೊಂದು ಚಳಿ ಬಿಸಿಲೆನ್ನದೆ ಯಾವಾಗಲೂ ಹರಿಯುತ್ತ ರಾಟೆ ಮನೆಯ ಬಲಕ್ಕಿರುವ ದೊಡ್ಡ ಕೆರೆಯನ್ನು ಸೇರುತ್ತಿತ್ತು. ಮಳೆ ಬರಲು ತೊಡಗಿದರೆ ಎಲ್ಲೆಲ್ಲಿಂದಲೋ ಹರಿದು ಬರುವ ರಾಡಿನೀರು ಆ ತೊರೆಯನ್ನು ಸೇರಿ ಕೆರೆಯೂ ತುಂಬಿ ಹರಿಯಲು ಶುರು ಮಾಡುತ್ತಿತ್ತು. ಕೆರೆ ತುಂಬಿ ಹರಿಯುವುದನ್ನು ಅರಿತಿರುವವೋ ಎಂಬಂತೆ ಕೆರೆಯ ನೂರಾರು ಮೀನುಗಳು ತೊರೆಯನ್ನು ಏರಿ ಈಜಿಕೊಂಡು ಅಲ್ಲಿ ಇಲ್ಲಿ ಹೊಂಡ ಪಾತಿಗಳಲ್ಲಿ ಸೇರಿಕೊಂಡು ಮೊಟ್ಟೆಯಿಡಲು ಶುರುಮಾಡುತ್ತಿದ್ದವು. ಹಾಗಾಗಿ ಮಳೆಬರಲು ಶುರುವಾಯಿತೆಂದರೆ ಹಗಲು ಕಾವಲುಗಾರ ಕುಂಞಿಕಣ್ಣನೂ ರಾತ್ರಿ ಕಾವಲುಗಾರ ಮೂಸಾಕಾಕಾನೂ ತೋಟಕಾಯುವುದರ ಜೊತೆಗೆ ಆಳುಗಳ ಕಣ್ಣಿಂದ ಈ ಮೀನುಗಳನ್ನೂ ಕಾಯುತ್ತಿದ್ದರು. ತೋಟದ ನಡುನಡುವೆ ಅಲ್ಲಲಿ ನೀರಿಲ್ಲದೆ ಒದ್ದಾಡುವ ಇವುಗಳನ್ನು ಅಮುಕಿ ಹಿಡಿದು ಚೀಲದಲ್ಲಿ ತುಂಬಿ ಸಾಹುಕಾರರ ಬಂಗಲೆಗೆ ರವಾನಿಸುತ್ತಿದ್ದರು. ಹೀಗೆ ಹತ್ತಿಬರುವ ಮೀನುಗಳ ಸಂಖ್ಯೆ ತಿಂದು ಮುಗಿಸಲಾಗದಷ್ಟು ಇದ್ದರೆ ಕೆಲವು ಮೀನುಗಳು ರೈಟರ ಮನೆಗೂ ಬರುತ್ತಿತ್ತು. ರೈಟರ ಮನೆಗೆ ಬಂದರೆ ಅದರಲ್ಲಿ ಮುದಾರನಿಗೂ ದೂಮಣ್ಣನಿಗೂ ಪಾಲು ಸಿಗುತ್ತಿತ್ತು. ಜೀವನದಲ್ಲಿ ಬೇರೆ ಏನಕ್ಕೂ ಆಸೆ ಪಡದ ಮುದಾರನಿಗೆ ಈ ಮೀನುಗಳ ಆಸೆಯನ್ನು ಅದುಮಿಡುವುದು ತನ್ನಿಂದ ಆಗುವುದಿಲ್ಲ ಎಂದು ಗೊತ್ತಿತ್ತು. ಹಾಗಾಗಿ ಮಳೆಗಾಲ ಬಂತೆಂದರೆ ರೈಟರ ಮನೆಯ ತಗ್ಗಿನಲ್ಲಿರುವ ಬತ್ತದ ಗದ್ದೆಯೊಳಕ್ಕೆ ಕೆಸರಿನಲ್ಲಿ ಕಾಲಿಡಲೂ ಆಗುವುದಿಲ್ಲವೆಂದು ನೆಪಹೇಳಿ ಆತ ತನ್ನ ದನಕರುಗಳನ್ನು ದೇವರ ಕಾಡಿನ ಕಡೆಗೆ ಹೊಡೆದು ಬಿಡುತ್ತಿದ್ದ.

ಕೊರಳಿಗೆ ಮರದ ಗಂಟೆಗಳನ್ನು ನೇತಾಡಿಸಿಕೊಂಡು ನಡೆದಾಡುವ ದೇವರ ಕೊಲ್ಲಿಯ ಬಾಯಿಬಾರದ ನಾಕಾಲಿಗಳು ಮಳೆಗಾಲ ಶುರುವಾಯಿತೆಂದರೆ ತಮ್ಮ ದಿಕ್ಕು ಬದಲಿಸಿ ಮುದಾರನನ್ನು ಹಿಂದೆ ಬಿಟ್ಟುಕೊಂಡು ದೇವರಕಾಡಿನೊಳಕ್ಕೆ ಹೊಕ್ಕು ಬಿಡುತ್ತಿದ್ದವು. ಯಾರೂ ಕಾಣದ ಆ ಕಾಡಿನಲ್ಲಿ ಮಳೆಯಲ್ಲಿ ದೊಡ್ಡ ದೊಡ್ಡ ಮರಳ ಅಡಿಯಲ್ಲಿ ಮಳೆಗೆ ಸಿಲುಕಿಕೊಂಡು ನಿಂತಿರುತ್ತಿದ್ದವು. ಎಂತಹ ಮಳೆಯಾದರೂ ಗೊರಬೆ ಹಾಕಿಕೊಂಡು ಅಡ್ಡಾಡುವ ಮುದಾರ ತೊರೆಗೆ ಕವಲುಗಳಾಗಿ ಸೇರುತ್ತಿರುವ ರಾಡಿ ನೀರಿನ ಸೆಲೆಗಳನ್ನು ಹುಡುಕಿಕೊಂಡು ಸಾಕಷ್ಟು ಮೀನುಗಳನ್ನು ತಾನೂ ಹಿಡಿದು ಅಡಗಿಸಿಕೊಂಡು ಬರುತ್ತಿದ್ದ. ಅದರಲ್ಲೂ ದೊಡ್ಡದೊಂದು ಪಾಲು ಉಸ್ಮಾನ್ ರೈಟರ ಬಿಡಾರಕ್ಕೆ ಸಂಜೆ ಕತ್ತಲಾಗುವಾಗ ಬಂದು ಸೇರುತ್ತಿತ್ತು. ಅದರಲ್ಲಿ ಇನ್ನೂ ಚಡಪಡಿಸುವ ಜೀವವಿರುವ ಸಣ್ಣಪುಟ್ಟ ಮೀನುಗಳಿದ್ದರೆ ಹಾಜಿರಾಳೂ ಸೈದಾಲಿಯೂ ಮುದಾರನ ಬಳಿಯಿಂದ ಅವುಗಳನ್ನು ಇಸಕೊಂಡು ಕೆಳಗೆ ಕಾಡು ಬಾಳೆಯ ಕಾಡಿನ ನಡುವಿರುವ ಬಾವಿಗೆ ಒಯ್ದು ಕೊಡಪಾನದಲ್ಲಿ ಇಳಿಸಿ ನೀರಿಗೆ ಬಿಡುತ್ತಿದ್ದರು.

ಸಾರಿಗೆ ಬೇರೇನೂ ಇಲ್ಲದಿದ್ದರೆ 'ಸೈದಾಲೀ ಬಾವಿಯಿಂದ ಮೀನು ಹಿಡಿದು ತಾ' ಎಂದು ಹಾಜಮ್ಮ ತಾಕೀತುಮಾಡುತ್ತಿದ್ದರು. ಸೈದಾಲಿ ಬಾವಿಗೆ ಗಾಳ ಎಸೆದು ಮೀನು ಹಿಡಿದು ಅದನ್ನು ತಿನ್ನುವ ಹೊತ್ತಲ್ಲಿ ಅದು ಬಾವಿಯ ಮೀನು ಎಂದು ಎಲ್ಲರಿಗೂ ತನ್ನಿಂತಾನಾಗಿ ಅದರ ರುಚಿಯಿಂದ ಗೊತ್ತಾಗುತ್ತಿತ್ತು. ಆ ಬಾವಿಯ ಮೀನಿನ ಸಾರಿನಲ್ಲೂ ಮುದಾರನಿಗೂ ಪಾಲು ಸಿಗುತ್ತಿತ್ತು. ಹಾಗಾಗಿ ಮಳೆ ಶುರುವಾಯಿತೆಂದರೆ ರೈಟರ ಮನೆಯಲ್ಲಿ ಎಲ್ಲರೂ ಮುದಾರ ಗೊರಬೆ ಹಾಕಿಕೊಂಡು ದನಕರುಗಳ ಹಿಂದೆ ದೇವರಕಾಡಿಗೆ ನಡೆಯುವುದನ್ನು ಆಸೆಯಿಂದ ನೋಡುತ್ತಿದ್ದರು. ಮುದಾರ ಹೊರಡುವಗ ಮಳೆ ಇಲ್ಲದಿದ್ದರೆ ರೈಟರ ಮಕ್ಕಳೂ ಆತನ ಹಿಂದೆ ದೇವರ ಕಾಡಿಗೆ ಹೋಗಲು ಆಸೆ ಪಡುತ್ತಿದ್ದರು. ಹಾಜಿರಾ ಸಣ್ಣವಳಿರುವಾಗ ಅವಳೂ ಹೋಗುತ್ತಿದ್ದಳು. ಈಗ ಅವಳು ಹೋಗುವುದು ನಿಲ್ಲಿಸಿದ ಮೇಲೆ ರೈಟರ ಮೊದಲ ಹೆಂಡತಿಯ ಇನ್ನಿಬ್ಬರು ಗಂಡು ಮಕ್ಕಳಾದ ಸೂಫಿ ಇಬ್ರಾಯಿಯೂ, ನೀರುಸೇದುವ ಸೈದಾಲಿಯೂ ಮುದಾರನ ಹಿಂದೆ ಹೋಗುತ್ತಿದ್ದರು. ಸೈದಾಲಿಗೆ ಮನಸಾದರೆ ಆತ ತನ್ನ ಹೆಗಲಮೇಲೆ ಹಾರೂನನ್ನೂ ಎತ್ತಿಕೊಂಡು ಅವರೆಲ್ಲರೂ ಸೇರಿ ಮುದಾರನು ಮೀನು ಹಿಡಿಯುವುದನ್ನು ನೋಡುತ್ತಿದ್ದರು. ಮುದಾರನು ನಿಂತುಕೊಂಡ ಮಳೆಯ ನಡುವೆ ಎಳೆಬಿಸಿಲಿನಲ್ಲಿ ತನ್ನ ಗೊರಬೆಯನ್ನು ಬಿಸಿಲಲ್ಲಿ ಒಣಗಲು ಅಂಗಾತ ಮಲಗಿಸಿ ದನಕರುಗಳನ್ನು ಕಣ್ಣಳತೆಯಲ್ಲಿ ಮೇಯಲು ಬಿಟ್ಟು ಮೀನು ಹಿಡಿಯುವ ಕಾಯಕದಲ್ಲಿ ತೊಡಗುತ್ತಿದ್ದನು. ರಾಡಿ ನೀರಿನ ಸೆಲೆಗಳ ಪೊಟರೆ ಪೊಟರೆಗಳಲ್ಲಿ ಕೈಹಾಕಿ ಕೋಲಿನಿಂದ ತಿವಿದು ಎಂತ ಎಂತಹದೋ ಹೆಸರಿನ ಮೀನುಗಳನ್ನು ತನ್ನ ಲಂಗೋಟಿಯೊಳಕ್ಕೆ ತುಂಬಿಸಿಕೊಳ್ಳುತ್ತಿದ್ದನು. ಯಾರು ಕೇಳಿದರೂ ಅವುಗಳನ್ನು ತೋರಿಸುತ್ತಿರಲಿಲ್ಲ. ಸಂಜೆಗತ್ತಲಲ್ಲಿ ಅವನು ಲಂಗೋಟಿಯ ಉಡಿಯಿಂದ ಒಂದೊಂದೇ ಮೀನುಗಳ ಹೆಸರು ಹಿಡಿದು ಹಿಚುಕಿ ಹೊರಗೆ ತೆಗೆಯುವುದನ್ನು ಎಲ್ಲರೂ ಕಾಯುತ್ತಿದ್ದರು. 'ತುಳುವಿನಲ್ಲಿ ಇದರ ಹೆಸರು ಮೊರಂಟೆ ಅಲ್ಲವಾ ಮುದಾರಾ, ಇದು ಮೊಡಂಜಿಯ ಮರಿಯಲ್ಲವಾ ಮುದಾರಾ' ಎಂದು ಹಾಜಮ್ಮ ಕೇಳಿ ಅದನ್ನು ಆತನ ಕೈಯಿಂದ ಮಣ್ಣಿನ ಮಡಕೆಗೆ ಹಾಕಿಸಿಕೊಳ್ಳುತ್ತಿದ್ದರು. ಹಾಜಮ್ಮ ಹೇಳುವುದು ಸರಿ ಇಲ್ಲದಿದ್ದರೂ ಮುದಾರನು ಏನೂ ಹೇಳದೆ ಅದನ್ನು ಹಾಕುತ್ತಿದ್ದನು. ಆತನಿಗೂ ಹಾಜಮ್ಮಳ ಮೀನಿನ ಆಸೆ ಕಂಡು ನಗು ಬರುತ್ತಿತ್ತು.

****

ನಾಲಕ್ಕು ರಾತ್ರಿ ನಾಲಕ್ಕು ಹಗಲು ಬಿಟ್ಟು ಬಿಟ್ಟು ಸುರಿದ ಕಾಫಿ ಹೂವಿನ ಮಳೆ ನಿನ್ನೆಯೇ ನಿಂತುಹೋಗಿತ್ತು. ಹೂವಿನಕೊಲ್ಲಿಯ ರೋಬಸ್ಟಾ, ಅರೇಬಿಕಾ ಗಿಡಗಳ ರೆಂಬೆಗಳಲ್ಲಿ ಬೆಳ್ಳಗೆ ಮಂಜು ಸುರಿದು ಕೊಂಡಂತೆ ಕಾಫಿಯ ಹೂಗಳು ಮೆತ್ತಿಕೊಂಡು ಹೂವಿನ ಪರಿಮಳ ಸುತ್ತಮುತ್ತಲಿನ ಕಾಫಿತೋಟಗಳಿಂದಲೂ ತೇಲಿ ದೇವರ ಕಾಡಿನೊಳಕ್ಕೂ ಬಂದು ನಿಂತಿತ್ತು. ಇನ್ನು ಮಳೆ ಸುರಿಯುವುದಿಲ್ಲ ಎನ್ನುವ ಹಾಗೆ ದೇವರ ಕಾಡಿನಲ್ಲಿ ಎಳೆಬಿಸಿಲಿನ ಬೆಳಕು ಹೊಳೆಯುತ್ತಿತ್ತು. ಆ ಬೆಳಕಿನಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಹೂದುಂಬಿಗಳೂ ಹೂ ಹಾತೆಗಳೂ ಜೇನು ನೊಣಗಳೂ ಹೆಲಿಕಾಫರ್ ಚಿಟ್ಟೆಗಳೂ ಕಾಡಿನಿಂದ ಕಾಫಿಗಿಡಗಳ ಮೇಲೂ ಅಲ್ಲಿಂದ ಕಾಡಿನ ಕಡೆಗೂ ಹಾರಾಡುತ್ತಿದ್ದವು. ರಾಡಿಯೆಲ್ಲಾ ಮುಗಿದು ದೇವರ ಕಾಡಿನ ತೊರೆ ಸಣ್ಣಗೆ ಸದ್ದು ಮಾಡುತ್ತಾ ಸ್ವಚ್ಛವಾಗಿ ಕೆಳಗಡೆಗೆ ಹರಿದು ಹೋಗುತ್ತಿತ್ತು. ಹರಿವ ತೊರೆ ಅಲ್ಲಲ್ಲಿ ನಿಂತು, ನಿಂತ ಆ ನೀರಿನಲ್ಲಿ ಒಂದೆರೆಡು ಪುಡಿಮೀನುಗಳು ಬಿಸಿಲಿಗೆ ಮಿನುಗುತ್ತ ಈಜಾಡುತ್ತಿದ್ದವು.

ತೋಟಕ್ಕೆ ತೋಟವೇ ಈ ದಿನ ಹೂವಿಂದ ತುಂಬಿ ಮಕ್ಕಾದಿಂದ ಮರಳಿ ಹೂವಿನ ಕೊಲ್ಲಿಗೆ ಹಿಂದಿನ ರಾತ್ರಿ ತಲುಪಿದ್ದ ಸಾಹುಕಾರರು ರಜಾ ಸಾರಿದ್ದರು. ಹೂವಿಂದ ತುಂಬಿರುವ ತೋಟದೊಳಗೆ ಯಾರೂ ಓಡಾಡಬಾರದೆಂದು ಚಕ್ರೋಲಿನಲ್ಲಿ ಹೇಳಿ ಮುಖದ ತುಂಬ ನಗು ತುಂಬಿಕೊಂಡು ಬಂಗಲೆಯ ಮೆಟ್ಟಲುಗಳನ್ನು ಏರುತ್ತ ಮೇಲಕ್ಕೆ ಮಾಯವಾಗಲು ನೋಡುತಿದ್ದರು. ಅವರಲ್ಲಿ ತನ್ನ ಸಂಬಳದ ಕುರಿತು ಏನೋ ಹೇಳಲಿಕ್ಕಿದೆಯೆಂದು ಉಸ್ಮಾನ್ ರೈಟರೂ ಕೈ ಕಟ್ಟಿಕೊಂಡು ನಡೆಯುತ್ತಿದ್ದರು. ತನಗೂ ಏನೋ ಹೇಳಲಿಕ್ಕಿದೆಯೆಂದು ಕತೆ ಹೇಳುವ ಪಾತಿಂಞಳೂ, ತನಗೂ ಹೇಳಲಿದೆಯೆಂದು ಮಕ್ಕಳನ್ನು ನೋಡುವ ಮರಿಯಮ್ಮಳೂ ರೈಟರ ಹಿಂದೆ ನಡೆಯುತ್ತಿದ್ದರು. ತಮ್ಮ ವಿಷಯವನ್ನು ಹೇಗೆ ಹೇಳುವುದೆಂದು ಗೊತ್ತಾಗದೆ ಹಾಲು ಕರೆಯುವ ನಂಬಿಯಾರರು ತೋಟದ ಆಫೀಸಿನ ಗೋಡೆಗೆ ಒಂದುಕಾಲು ಆನಿಸಿ ನಿಂತು ಯೋಚಿಸುತ್ತಿದ್ದರು.

ಇವರೆಲ್ಲರ ಮುಂದೆ ತನ್ನ ವಿಷಯ ಹೇಳಲು ಆಗುವುದಿಲ್ಲವೆಂದು ನಿಶ್ಚಯಿಸಿಕೊಂಡ ಅರಬಿ ಕಲಿಸುವ ಮುಲ್ಲಾಕ ಕುಳಿತಲ್ಲಿಂದ ಎದ್ದು ಮುಂಡಾಸು ಕೊಡವಿ, ಮನಸಿನಲ್ಲೇ ಹೂಂಕರಿಸಿ ಮೇಲಿನ ಪಾಡಿಯ ಕಡೆಗೆ ನಡೆಯಲು ತೊಡಗಿದ್ದರು. ಕುಂಞಿಕಣ್ಣ ಏನೂ ಹೇಳದೆ ಉಸ್ಮಾನ್ ರೈಟರು ಬಂಗಲೆಯಿಂದ ಸಂಬಳದ ವಿಷಯ ಹೇಳಿ ಮುಗಿಸಿ ಬರುವುದನ್ನು ಕಾಯುತ್ತ ನಿಂತಿದ್ದ. ಮರಿಯಮ್ಮಳ ನಾಯಿ ಜಿಮ್ಮಿ ಆಕೆ ಬಂಗಲೆಯಿಂದ ಮಾತು ಮುಗಿಸಿ ಬರುವುದನ್ನೇ ಕಾಯುತ್ತ ಬಂಗಲೆಯ ಹೂವಿನ ತೋಟದ ನಡುವೆ ಬಿಸಿಲು ಕಾಯುತ್ತ ಒಂಟಿಕಾಲಲ್ಲಿ ನಿಂತಿತ್ತು. ಅದರ ಮೈಯ ಗಾಯಗಳು ಬಹುತೇಕ ಒಣಗಿದ್ದರೂ ಕುಂಟುವ ಕಾಲು ಇನ್ನೂ ಸರಿಯಾಗಿರಲಿಲ್ಲ. ಹೂವಿನ ತೋಟದ ನಡುವೆ ಮಸುಕು ಮಸುಕಾಗಿ ನಿಂತಿದ್ದ ಜಿಮ್ಮಿಯನ್ನು ಕುಂಞಿಕಣ್ಣ ಏನೂ ಎಂದು ಗೊತ್ತಾಗದೆ ನೋಡುತ್ತಿದ್ದ. ನಂಬಿಯಾರರೂ ಯಾಕೋ ಮಂಕಾಗಿದ್ದರು. ಇದರೆಲ್ಲದರ ನಡುವೆ ನೀರು ಸೇದುವ ಸೈದಾಲಿ ತಾನೂ ಅಲ್ಲಿ ನಿಂತುಕೊಂಡು ಸುಮ್ಮನೆ ನೋಡುತ್ತಿದ್ದ. ರೈಟರ ಮನೆಯಲ್ಲಿ ಸಂಬಳವಿಲ್ಲದೆ ನೀರು ಸೇದುವುದು ತನಗೆ ಆಗುವುದಿಲ್ಲವೆಂದೂ ಹೂವಿನ ಕೊಲ್ಲಿಯ ದೊಡ್ಡ ಗೇಟನ್ನು ಕಾಯುವ ಗೇಟುಪಾರೆಯ ಕೆಲಸವಾದರೂ ಆಗುವುದೆಂದು ಇಲ್ಲವಾದರೆ ಇದ್ದಿಲು ಮಾಡುವ ಸಿಲೋನ್ ಅಣ್ಣಾಚಿಗೆ ಸಹಾಯ ಮಾಡುವ ಕೆಲಸವಾದರೂ ಆಗಬಹುದೆಂದೂ ಆತನಿಗೆ ಸಾಹುಕಾರರಲ್ಲಿ ಕೇಳಬೇಕಿತ್ತು. ಆದರೆ ಸಾಹುಕಾರರು ಆತನು ಅಲ್ಲಿ ಇರುವನು ಎಂಬುದನ್ನೂ ಗಮನಿಸದೆ ಬಂಗಲೆಯ ಮೆಟ್ಟಿಲುಗಳನ್ನು ಹತ್ತಿಹೋಗಿದ್ದರು. ಸೈದಾಲಿಗೆ ಸಿಟ್ಟು ಬಂದಿತ್ತು. ಟ್ರಾಕ್ಟರ್ ಓಡಿಸುವ ವೇಲಾಯುದ ಟ್ರಾಕ್ಟರಿನ ಮುಂದೆ ಬಗ್ಗಿಕೊಂಡು ಏನನ್ನೋ ಸರಿಮಾಡಲು ತೊಡಗಿದ್ದ. ದೂರದಲಿ ದೊಡ್ಡಗೇಟಿನ ಕಡೆಯಿಂದ ಬಂಗಲೆಯ ಕಡೆಗೆ ಬರುವ ಟಾರುದಾರಿಯಲ್ಲಿ ಮುಸಾಕಾಕಾ ನಡೆದು ಬರುತ್ತಿದ್ದರು. ಅವರ ಹಿಂದೆ ಅಜ್ಮೀರಿನ ಮಿಠಾಯಿ ಪಾಪಾ ಜೋಳಿಗೆ ತೂಗಿಸಿಕೊಂಡು ಬರುತ್ತಿದ್ದರು.ಹಾಲು ಕರೆದು ಮುಗಿಸಿದ ಹಸುಗಳನ್ನು ಕರೆದುಕೊಂಡು ಮುದಾರ ಬಂಗಲೆಯ ಹಿಂದಿನ ಕೊಟ್ಟಿಗೆಯ ದಾರಿಯಿಂದ ಹಾಡು ಹೇಳುತ್ತ ನಡೆದು ಹೋಗುತ್ತಿರುವುದು ಕೇಳಿಸುತ್ತಿತ್ತು.ಹೂವಿನಕೊಲ್ಲಿಯ ಎಲ್ಲ ಕಡೆಯಿಂದಲು ಕಾಫಿ ಹೂವಿನ ಘಾಟು ತಲೆ ತಿರುಗುವಂತೆ ಸೂಸುತ್ತಿತ್ತು. ಏರುತ್ತಿರುವ ಎಳೆ ಬಿಸಿಲಿನಲ್ಲಿ ಆ ಪರಿಮಳದ ಘಾಟು ಇನ್ನೂ ಹೆಚ್ಚಾಗತೊಡಗಿತ್ತು.

ಕೆಳಗಿನ ಪಾಡಿಯ ಮುಸಾಕಾಕನ ಲೈನು ಮನೆಯಲ್ಲಿ ಅವರ ಹೆಂಡತಿ ಕುಂಞಿಪಾತುಮ್ಮ ಎಂದಿನಂತೆ ಜೀವ ಹಿಡಿದುಕೊಂಡು ಕೆಮ್ಮುತಿದ್ದರು. ಕಾಫಿಗೆ ಹೂ ಬಿಡುವ ಕಾಲದಲ್ಲಿ ಆ ಕೆಮ್ಮು ಅವರನ್ನು ಇನ್ನಿಲ್ಲದಂತೆ ಜೀವ ಹಿಂಡುತ್ತಿತ್ತು. ಸೈಕಲ್ ಮಹಮ್ಮದನ ಹೆಂಡತಿ ಆಸಿಯಾ ಹೋಗುತ್ತಿರುವ ಕುಂಞಿಪಾತುಮ್ಮಳ ಜೀವವನ್ನು ಹಿಡಿದಿಡಲು ನೋಡುತ್ತಾ ಅವರ ಬೆನ್ನನ್ನು ನೀವಿ ಕೊಡುತ್ತಿದ್ದಳು. 'ಇಲ್ಲಿ ಒಬ್ಬರು ಅವಸಾನದ ಉಸಿರನ್ನು ಎಳೆಯುತ್ತಿರುವಾಗ ಅವರನ್ನು ನೋಡಿಕೊಳ್ಳಲು ಈ ಹೂವಿನ ಕೊಲ್ಲಿಯಲಿ ಒಂದು ಜೀವವೂ ಇಲ್ಲವೇ ಪಡೆದವನೇ, ಈ ಮೂಸಾಕಾಕಾನೂ ಬರಲಿಲ್ಲವಲ್ಲಾ ಅಲ್ಲಾಹುವೇ' ಎಂದು ಆಕೆ ಮನಸಿನಲ್ಲೇ ಅಂದುಕೊಳ್ಳುತ್ತಾ ನೀವುತ್ತಿದ್ದಳು. ಪಾಡಿಯ ಅಂಗಳದಲ್ಲಿ ಬಿಸಿಲಿಗೆ ಒಣಗಿಸಲು ಹಾಕಿದ್ದ ಸೀರೆ ಬಟ್ಟೆಗಳೂ, ಬಿದ್ದ ಮರದ ಸೌದೆ ತುಂಡುಗಳೂ, ಮಕ್ಕಳ ತೊಟ್ಟಿಲುಗಳೂ ಅದರ ನಡುವೆ ಕೋಳಿಗಳೂ ಮರಿಗಳೂ ಓಡಾಡುತ್ತಿದ್ದವು.

ಇದು ಯಾವುದರ ಪರಿವೆಯೂ ಇಲ್ಲದೆ ದೇವರ ಕಾಡಿನ ತೊರೆಯ ಮೇಲೆ ಬೋರಲಾಗಿ ಬಿದ್ದಿದ್ದ ಅತ್ತಿಯ ಮರೊವೊಂದರ ಟೊಳ್ಳು ಕಾಂಡದ ಮೇಲೆ ಕುಳಿತು ತಿಳಿ ನೀರಿನಲ್ಲಿ ತನ್ನ ಪ್ರತಿರೂಪವನ್ನು ನೋಡುತ್ತಾ ಸೈಕಲ್ ಮಹಮದ್ ಚಿಂತೆಯಲ್ಲಿ ಮುಳುಗಿದ್ದ. ಆತನ ಕೈಯಲ್ಲಿದ್ದ ಸೌದೆ ಒಡೆಯುವ ಸಣ್ಣ ಕೊಡಲಿ ಅತ್ತಿಯ ಕಾಂಡವನ್ನು ಸುಮ್ಮನೆ ಕಚ್ಚಿಕೊಂಡಿತ್ತು. ಈ ದೇವರ ಕಾಡಲ್ಲಿ ಬಿದ್ದಿರುವ ಈ ಮರವನ್ನು ಸೀಳಿ ಸೌದೆ ಮಾಡಿ ಅಟ್ಟಿ ಮಾಡಿಟ್ಟು ಆ ಅಟ್ಟಿಯನ್ನು ನೋಡಿದ ಮೇಲೆ ಮಾತ್ರ ಚಂಗೂಲಿಯನ್ನು ಕೊಡುವುದಾಗಿ ಹೇಳಿ ಆತನನ್ನು ಉಸ್ಮಾನ್ ರೈಟರು ಚಕ್ರೋಲ್ ಶುರುವಾಗುವ ಮೊದಲೇ ಕಾಡಿನ ಕಡೆಗೆ ಓಡಿಸಿಬಿಟ್ಟಿದ್ದರು. ಇದೆಲ್ಲವೂ ತನ್ನ ಹೆಂಡತಿ ಆಸಿಯಾಳ ಚಾಡಿ ಹೇಳುವ ಸ್ವಭಾವದಿಂದಾಗಿಯೇ ಆಗಿರುವುದು ಎಂಬ ವಿಷಯ ಆ ನೀರಲ್ಲಿ ತನ್ನ ಮುಖವನ್ನು ನೋಡುತ್ತ ನೋಡುತ್ತಾ ಸೈಕಲ್ ಮಹಮ್ಮದನಿಗೆ ಗೊತ್ತಾಗುತಿತ್ತು.

'ಈ ಹರಿತವಿಲ್ಲದ ಕೊಡಲಿಯಲ್ಲಿ ಸೌದೆ ಒಡೆಯುವುದೋ, ಇಲ್ಲಾ ನಿನ್ನ ತಲೆ ಒಡೆಯುವುದೋ ಹಾಳಾದವಳೇ' ಎಂದು ಅವಳಿಗೆ ಶಾಪ ಹಾಕಿಕೊಂಡೇ ಹೊರಟಿದ್ದ ಸೈಕಲ್ ಮಹಮ್ಮದ್ ಅಲ್ಲಿ ಇಲ್ಲಿ ನಿಂತು ಸಮಯ ಕಳೆದು ಯಾವಾಗಲೂ ಮದ್ಯಾಹ್ನ ಬರುವ ವಿಮಾನ ಆಕಾಶದಲ್ಲಿ ಬರುವ ಹೊತ್ತಿಗೆ ದೇವರ ಕಾಡನ್ನು ಸೇರಿ ತಾನು ಒಡೆಯಬೇಕಾಗಿರುವ ಕಾಂಡದ ಮೇಲೇರಿ ಕುಳಿತು ಯೋಚಿಸುತ್ತಿದ್ದನು. ಎಲ್ಲಿಯೋ ಸಿದ್ದಾಪುರದಲ್ಲೋ, ಶನಿವಾರ ಸಂತೆಯಲ್ಲೋ, ಸುಂಟಿಕೊಪ್ಪದಲ್ಲೋ, ಸೋಮವಾರ ಪೇಟೆಯಲ್ಲೋ ಸೈಕಲ್ಲಿನಲ್ಲಿ ಬ್ಯಾಲೆನ್ಸ್ ಮಾಡುತ್ತಾ ಸುತ್ತು ಹಾಕಿಕೊಂಡಿರುತ್ತಿದ್ದ ತನ್ನನ್ನು ಹೀಗೆ ಆಗಾಗ ಹಠಮಾಡಿ ಹಿಡಿದು ತಂದು ಸೌದೆ ಒಡೆಯುವ ಕೆಲಸಕ್ಕೆ ಹಚ್ಚುವ ಹೆಂಡತಿ ಆಸಿಯಾಳ ತಲೆಯನ್ನೂ ಕೊಡಲಿಯಿಂದ ಒಡೆಯಬೇಕು ಎಂದು ಆತನಿಗೆ ಅನ್ನಿಸುತ್ತಿತ್ತು.
ರಾಜಾದಿರಾಜನಂತೆ ಸಂತೆಗಳಲ್ಲಿ ಸೈಕಲ್ಲು ಸುತ್ತುತ್ತಾ, ತಲೆಗೂದಲಲ್ಲಿ ಲಾರಿಗಳನ್ನೂ ಬಸ್ಸುಗಳನ್ನೂ ಎಳೆಯುತ್ತಾ, ಹಲ್ಲಿನಲ್ಲಿ ಅರೆಯುವ ಕಲ್ಲುಗಳನ್ನೂ ನೀರಿನ ಕೊಡಪಾನಗಳನ್ನು ಎತ್ತುತ್ತಾ, ಎದೆಯಿಂದ ಟ್ಯೂಬುಲೈಟುಗಳನ್ನು ಒಡೆದು ಒಡೆದ ಅವುಗಳ ಗಾಜುಗಳನ್ನು ಜಗಿದು ತಿನ್ನುತ್ತಾ, ಮಣ್ಣಿನಲ್ಲಿ ಗುಂಡಿ ಮಾಡಿ ಅದರೊಳಗೆ ಹೊಕ್ಕು ಮೇಲೆ ಬೆಂಕಿ ಹಾಕಿಸಿಕೊಂಡು ಗುಂಡಿಯ ಒಳಗೆ ನಾಲ್ಕು ತಾಸುಗಳ ಕಾಲ ಉಸಿರಿಲ್ಲದೆ ಬದುಕಿ ಹೊರಬರುವ ತನ್ನನ್ನು ಹೀಗೆ ಸೀರೆಯ ಸೆರಗಲ್ಲಿ ಸುತ್ತಿತಂದು ಹೂವಿನ ಕೊಲ್ಲಿಯ ಒಳಗೆ ಕಟ್ಟಿಹಾಕಿ ಬಿಡುವ ಅವಳ ಗಂಟಲನ್ನು ಹಿಸುಕಬೇಕು ಅನ್ನಿಸುತ್ತಿತ್ತು.ಆದರೆ ಅದು ಯಾವುದೂ ಆಗದೆ ರಾತ್ರಿಯಲ್ಲಿ ಅವಳನ್ನು ತಬ್ಬಿಮಲಗಿಕೊಂಡಿದ್ದ. ಬೆಳಿಗ್ಗೆ ಎದ್ದು ಅಂಗಳದಲ್ಲಿ ಬಿಸಿಲು ಕಾಯಿಸುತ್ತಾ ಕುಳಿತಿರಬೇಕಾದರೆ ಚಕ್ರೋಲಿಗೆ ರೈಟರು ಕರೆಯುತ್ತಿದ್ದಾರೆ ಅಂತ ಸೈದಾಲಿ ಹೇಳಿದ್ದ.

'ತಿಕದಲ್ಲಿ ಪಸೆಯಿದ್ದರೆ ಕಾಲಿಗೆ ಸೈಕಲ್ಲು ಕಟ್ಟಿಕೊಂಡು ಸುತ್ತುವುದು ನಿಲ್ಲಿಸಿ, ಸೌದೆ ಒಡೆದು ಚಂಗೂಲಿ ಸಂಪಾದಿಸಿ ತನ್ನಿ.' ಎಂದು ಆಸಿಯಾ ಬೆಲ್ಲದ ಕಾಫಿ ತಂದಿಟ್ಟು ರಪ್ಪೆಂದು ಅಲ್ಲಿಂದ ಹೊರಟು ಹೋಗಿದ್ದಳು.

ಈಗ ನಡುಮದ್ಯಾಹ್ನದ ಹೊತ್ತಾದರೂ ಏನೂ ಮಾಡದೆ ಹೂವಿನಕೊಲ್ಲಿಯ ಆಕಾಶದಲ್ಲಿ ನಿಧಾನಕ್ಕೆ ಮರೆಯಾಗುತ್ತಿರುವ ವಿಮಾನವನ್ನು ನೋಡಿಕೊಂಡು ಈ ಹರಿತವಿಲ್ಲದ ಕೊಡಲಿಯಲ್ಲಿ ಈ ಹಸಿ ಮರವನ್ನು ಒಡೆಯಲು ನನಗೇನು ಮರುಳಾ ಎಂದು ಸೈಕಲ್ ಮಹಮ್ಮದ್ ಯೋಚಿಸಿಕೊಂಡು ಕುಳಿತಿದ್ದ.

Post new comment

The content of this field is kept private and will not be shown publicly.
6 + 8 =
Solve this simple math problem and enter the result. E.g. for 1+3, enter 4.